ಇಂದು ಆಲ್ ರೌಂಡರ್ ಆಗಿ ಟೀಮ್ ಇಂಡಿಯಾದಲ್ಲಿ ಮಿಂಚುತ್ತಿರುವ ಜಡೇಜಾ ಅವರು ಪಟ್ಟ ಕಷ್ಟಗಳ ಬಗ್ಗೆ ನಿಮಗೆಷ್ಟು ಗೊತ್ತು??
ರವೀಂದ್ರ ಜಡೇಜಾ ಅವರು ಟೀಮ್ ಇಂಡಿಯಾದ ಭರವಸೆಯ ಆಲ್ರೌಂಡರ್ ಎಂಬುದು ಎಲ್ಲರಿಗೂ ಸಹ ತಿಳಿದಿದೆ. ತಮ್ಮ ಸ್ಪಿನ್ ಬೌಲಿಂಗ್ ಮೂಲಕವೇ ಬ್ಯಾಟ್ಸ್ ಮೆನ್ ಗಳ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ ವಿಕೆಟ್ ಕಬಳಿಸುವ ಸಾಮರ್ಥ್ಯವನ್ನು ಹೊಂದಿರುವ ಜಡೇಜಾ ಅವರು ಅಷ್ಟೇ ಅದ್ಭುತ ಬ್ಯಾಟಿಂಗ್ ಸಹ ಮಾಡಬಲ್ಲರು.
ತಮ್ಮ ಅಮೋಘ ಪ್ರದರ್ಶನದಿಂದ ತಂಡವನ್ನು ಅದೆಷ್ಟೋ ಬಾರಿ ಗೆಲುವಿನ ದಡ ಮುಟ್ಟಿಸುವಲ್ಲಿ ಜಡೇಜಾ ಯಶಸ್ವಿಯಾಗಿದ್ದಾರೆ. ಇಂತಹ ಜಡೇಜಾ ಅವರು ಕ್ರಿಕೆಟ್ ಗೆ ಪಾದಾರ್ಪಣೆ ಮಾಡುವ ಮೊದಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಪ್ರತಿಯೊಬ್ಬ ಕ್ರಿಕೆಟಿಗನ ಜೀವನದಲ್ಲೂ ಕಷ್ಟಗಳು ಸರ್ವೇ ಸಮಾನ್ಯ. ಕ್ರಿಕೆಟ್ ಜೀವನ ಆರಂಭಿಸುವ ಮೊದಲು ಇವರ ಕಷ್ಟಗಳನ್ನು ಕೇಳಿದರೆ ಬೇಸರವಾಗುತ್ತದೆ.
ಇದಕ್ಕೆ ರವೀಂದ್ರ ಜಡೇಜ ಅವರು ಹೊರತಾಗಿಲ್ಲ. ಹೌದು 1988 ರಲ್ಲಿ ಗುಜರಾತ್ ನಲ್ಲಿ ಜನಿಸಿದ ರವೀಂದ್ರ ಜಡೇಜಾ ಅವರು ತಾನೊಬ್ಬ ಕ್ರಿಕೆಟಿಗನಾಗಬೇಕೆಂದು ಚಿಕ್ಕಂದಿನಲ್ಲೇ ನಿರ್ಧಾರ ಮಾಡಿಯಾಗಿತ್ತು. ಶಾಲಾ ದಿನಗಳಲ್ಲಿ ಶಾಲೆಗೆ ರಜೆ ಹಾಕಿ ಕ್ರಿಕೆಟ್ ಆಡಲು ಹೋಗುತ್ತಿದ್ದ ಜಡೇಜಾ ಅವರಿಗೆ ಸ್ನೇಹಿತರು ಬ್ಯಾಟಿಂಗ್ ಆಡಲು ಕೊಡುತ್ತಿರಲಿಲ್ಲ ಇದರಿಂದ ಜಡೇಜಾ ಅವರು ಬಹಳ ಬೇಸರಗೊಳ್ಳುತ್ತಿದ್ದರು.
ರವೀಂದ್ರ ಜಡೇಜಾ ಅವರ 5 ಜನದ ಕುಟುಂಬ ಕೇವಲ ಒಂದು ರೂಮಿರುವ ಮನೆಯಲ್ಲಿ ವಾಸವಾಗಿದ್ದರು. ಇವರ ತಾಯಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇವರ ತಂದೆಗೆ ಯಾವುದೇ ಖಾಯಂ ಕೆಲಸವಿರಲಿಲ್ಲ. ಆಗಾಗ ಸಿಕ್ಕ ಕೆಲಸಗಳನ್ನು ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಇವರ ತಂದೆಗೆ ಮಗನನ್ನು ಸೇನೆಗೆ ಸೇರಿಸಬೇಕೆಂಬ ಹಂಬಲ.
ಆದರೆ ಜಡೇಜಾ ಅವರು ಅದಾಗಲೇ ತಾನೊಬ್ಬ ಕ್ರಿಕೆಟರ್ ಆಗಬೇಕೆಂದು ನಿರ್ಧಾರ ಮಾಡಿಯಾಗಿತ್ತು. ಇದಕ್ಕೆ ಸೋಲಲೇಬೇಕಾದ ಇವರ ತಂದೆ ಒಂದು ಗಟ್ಟಿ ನಿರ್ಧಾರ ಮಾಡಿದರು. ಜಡೇಜಾ ಅವರ ತಂದೆಗೆ ಪರಿಚಯವಿದ್ದ ಪೋಲೀಸ್ ಒಬ್ಬರಿಗೆ ಕ್ರಿಕೆಟ್ ಎಂದರೆ ಎಲ್ಲಿಲ್ಲದ ಪ್ರೀತಿ. ಆದ್ದರಿಂದಲೇ ಆಸಕ್ತಿಯಿರುವ ಮಕ್ಕಳಿಗೆ ಕ್ರಿಕೆಟ್ ಹೇಳಿಕೊಡುತ್ತಿದ್ದರು. ಜಡೇಜಾ ಅವರ ತಂದೆ ಜಡೇಜಾ ಅವರನ್ನು ಇವರ ಬಳಿ ಕರೆತಂದು ಜಡೇಜಾ ಅವರಿಗೆ ಕ್ರಿಕೆಟ್ ಹೇಳಿಕೊಡುವಂತೆ ಕೇಳಿಕೊಂಡರು.
ಅದರಂತೆಯೇ ಜಡೇಜಾ ಅವರು ಕ್ರಿಕೆಟ್ ಅಭ್ಯಾಸ ಮಾಡಲು ಶುರು ಮಾಡಿದರು. ಮೊದಲಿಗೆ ವೇಗದ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದ ಜಡೇಜಾ ಅವರ ಎತ್ತರ ಕಡಿಮೆಯಿದ್ದ ಕಾರಣ ಸ್ಪಿನ್ ಅಭ್ಯಾಸ ಮಾಡುವಂತೆ ಇವರ ಕೋಚ್ ಸಲಹೆ ನೀಡಿದರು. ಅದರಂತೆಯೇ ಜಡೇಜಾ ಅವರು ಸ್ಪಿನ್ ಬೌಲಿಂಗ್ ಅಭ್ಯಾಸ ಮಾಡಲು ಶುರು ಮಾಡಿದರು.
ಇನ್ನು ಪಂದ್ಯವೊಂದರಲ್ಲಿ ಕಳಪೆ ಪ್ರದರ್ಶನ ನೀಡಿದ ಜಡೇಜಾ ಅವರಿಗೆ ಅವರ ಕೋಚ್ ಎಲ್ಲರ ಮುಂದೆ ಕಪಾಳ ಮೋಕ್ಷ ಮಾಡಿದರು. ಆ ಪಂದ್ಯದಲ್ಲಿಯೇ 5 ವಿಕೆಟ್ ಕಬಳಿಸಿ ಜಡೇಜಾ ಅವರು ಭೇಷ್ ಎನಿಸಿಕೊಂಡರು. ಇದಾದ ಬಳಿಕ ಸತತ ಪರಿಶ್ರಮದಿಂದ ಟೀಮ್ ಇಂಡಿಯಾರ ಅಂಡರ್ 19 ತಂಡಕ್ಕೆ ಆಯ್ಕೆಯಾದರು. ಇದಾದ ಕೇವಲ 5 ದಿನದಲ್ಲೇ ಜಡೇಜಾ ಅವರ ತಾಯಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದರು.
ಇವರ ದುಡಿಮೆಯನ್ನೇ ನಂಬಿದ್ದ ಕುಟುಂಬದ ನಿರ್ವಹಣೆ ಬಹಳ ಕಷ್ಟವಾಯಿತು. ಇದರಿಂದ ಬಹಳ ಚಿಂತೆಗೀಡಾದ ಜಡೇಜಾ ಅವರು ಕ್ರಿಕೆಟ್ ತೊರೆಯುವ ನಿರ್ಧಾರ ಸಹ ಮಾಡಿದ್ದರು. ಆದರೆ ಇಹಲೋಕ ತ್ಯಜಿಸಿದ ಇವರ ತಾಯಿಯ ಕೆಲಸ ಜಡೇಜಾ ಅವರ ಅಕ್ಕನ ಪಾಲಾಯಿತು. ಇದರಿಂದ ಕುಟುಂಬ ಸ್ವಲ್ಪ ಸುಧಾರಿಸಿಕೊಳ್ಳುವಂತಾಯಿತು.
ಇಲ್ಲಿಂದ ಕಷ್ಟ ಪಟ್ಟು , ಹಿಂತಿರುಗಿ ನೋಡದೆ ಕೇವಲ ಕ್ರಿಕೆಟ್ ಬಗ್ಗೆ ಗಮನ ಹರಿಸಿದ ಜಡೇಜಾ ಅವರು ಅಂಡರ್ 19 ತಂಡದಲ್ಲಿ ರಣಜಿ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಮ್ ಇಂಡಿಯಾ ತಂಡಕ್ಕೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿ ಇಂದು ಭರವಸೆಯ ಹಾಗೂ ಇಂಡಿಯಾ ತಂಡದ ಖಾಯಂ ಆಟಗಾರನಾಗಿ ಮಿಂಚುತ್ತಿದ್ದಾರೆ…..